ಅಂಕೋಲಾ: ವಾಯವ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ತನ್ನ ಜೀವನವನ್ನು ಸಂಸ್ಥೆಯ ಬೆಳವಣಿಗೆಗೆ ಅರ್ಪಿಸಿದ ದಾಮೋದರ್ ತಿಮ್ಮಪ್ಪ ಪಟಗಾರರ ನಿವೃತ್ತಿ ಬೀಳ್ಕೊಡುಗೆ ಸಮಾರಂಭವು ಸೆಪ್ಟೆಂಬರ್ 30, 2025 ರಂದು ಭಾವಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿತು.
ಸದರಿಯವರು ಮೊದಲಿಗೆ ನಿರ್ವಾಹಕರಾಗಿ ಸೇವೆಗೆ ಸೇರ್ಪಡೆಯಾಗಿ, ಬಳಿಕ ಮುಂಬಡ್ತಿ ಪಡೆದು ಅಂಕೋಲಾ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಗೋಕರ್ಣದಲ್ಲಿನ ಕಂಟ್ರೋಲರ್ (ಸಂಚಾರ ನಿಯಂತ್ರಕರ) ಹುದ್ದೆಯಿಂದ ನಿವೃತ್ತಿ ಹೊಂದಿದರು. ದೀರ್ಘಾವಧಿಯ ಸೇವಾ ಸಮರ್ಪಣೆ, ಶಿಸ್ತಿನ ಜೀವನ, ಹಾಗೂ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡ ನಡೆಗಳನ್ನು ನೆನೆದು ಘಟಕದ ಸಹೋದ್ಯೋಗಿಗಳು ಗೌರವ ಸಲ್ಲಿಸಿದರು. ನಿವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಮೈಸೂರು ಪೇಟ, ಶಾಲು, ಹಣ್ಣು ಹಂಪಲು ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಕೃತಜ್ಞತೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಪಟಗಾರರ ಧರ್ಮಪತ್ನಿ ಹಾಗೂ ಮಕ್ಕಳು ಉಪಸ್ಥಿತರಿದ್ದು, ಅವರ ಸಂತೋಷದಲ್ಲಿ ಪಾಲುದಾರರಾದರು. ಧಾರ್ಮಿಕ ಸೇವಾ ಸಮಿತಿಯ ಸುಬ್ರಮಣ್ಯ ಆರ್. ಬಂಟ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ಸೊಗಸು ತುಂಬಿದರು.

ಘಟಕ ವ್ಯವಸ್ಥಾಪಕ ಚೈತನ್ಯ ಅಗಳಗಟ್ಟಿ ಮಾತನಾಡಿ – “36 ವರ್ಷಗಳ ಕಾಲ ಸಂಸ್ಥೆಯ ಸೇವೆಯಲ್ಲಿ ನಿರಂತರ ಪರಿಶ್ರಮ ತೋರಿದ ದಾಮೋದರ್ ತಿಮ್ಮಪ್ಪ ಪಟಗಾರರ ನಿವೃತ್ತಿ ನಮ್ಮೆಲ್ಲರಿಗೂ ಹೆಮ್ಮೆ ತರಿಸುತ್ತದೆ. ಅವರು ಮೊದಲಿಗೆ ನಿರ್ವಾಹಕರಾಗಿ ಸೇರಿ, ಬಳಿಕ ಗೋಕರ್ಣ ಕಂಟ್ರೋಲರ್ ಹುದ್ದೆಯವರೆಗೆ ಮುನ್ನಡೆದು ಕೆಲಸ ಮಾಡಿದ ರೀತಿಯು ಸಹೋದ್ಯೋಗಿಗಳಿಗೆ ಮಾದರಿಯಾಗಿದೆ. ಅವರ ಶಿಸ್ತಿನ ನಡೆ, ನಿಷ್ಠೆಯ ಸೇವೆ ಹಾಗೂ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಮನೋಭಾವವು ಘಟಕದ ಪ್ರಗತಿಗೆ ಬಹುಮುಖ್ಯ ಕಾರಣವಾಗಿದೆ. ಇಂತಹ ಅನುಭವಸಂಪನ್ನ ಸಹೋದ್ಯೋಗಿಯ ಸೇವೆಯನ್ನು ನೆನಪಿಸಿಕೊಂಡಾಗ, ಸಂಸ್ಥೆಗೆ ಅವರು ಬಿಟ್ಟಿರುವ ಗುರುತು ಅಚ್ಚಳಿಯದಂತದ್ದು. ನಿವೃತ್ತಿ ಜೀವನದಲ್ಲೂ ಆರೋಗ್ಯ, ಸಂತೋಷ ಮತ್ತು ಶಾಂತಿ ದೊರಕಲೆಂದು ಹಾರೈಸುತ್ತೇವೆ” ಎಂದು ಹೇಳಿದರು.
ಇದೆ ವೇಳೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಹಾಯಕ ಸಂಚಾರ ಅಧೀಕ್ಷಕ ಶಿವಾನಂದ ನಾಯ್ಕ, ಸಹಾಯಕ ಕಾರ್ಯ ಅಧೀಕ್ಷಕ ಮಂಜುನಾಥ್ ಎಲ್. ನಾಯ್ಕ, ಲೆಕ್ಕಪತ್ರ ಮೇಲ್ವಿಚಾರಕ ವಿನಾಯಕ್ ಪಟಗಾರ, ಜೊತೆಗೆ ಸಿಬ್ಬಂದಿಗಳಾದ ಸಾಗರ್ ಎಸ್. ನಾಯ್ಕ, ಸತೀಶ್ ಎಂ. ಕಡಲೆ, ವೇದಾ ನಾಯ್ಕ, ಮಹಾಲಕ್ಷ್ಮಿ ನಾಯ್ಕ, ಪ್ರತಿಮಾ ಶೆಟ್ಟಿ, ಗೋಪಾಲ್ ಪಟಗಾರ, ವೆಂಕಟೇಶ್ ನಾಯ್ಕ್, ಗಣಪತಿ ಗೌಡ, ಪ್ರಕಾಶ್ ಗೌಡ ಮತ್ತು ಇತರರು ಹಾಜರಾಗಿ ಸದರಿಯವರ ಸೇವಾ ಮನೋಭಾವವನ್ನು ಮೆಚ್ಚಿ ಕೃತಜ್ಞತೆ ಸಲ್ಲಿಸಿದರು.
ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ದಿಲೀಪ ಜೈವಂತ ನಾಯ್ಕ ಅವರು ಕಾರ್ಯಕ್ರಮದ ಮುಂದಾಳತ್ವ ವಹಿಸಿ ಸಮಾರಂಭವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ವರದಿ: ಕಿರಣ ಗಾಂವಕರ

