ಭಾರತವು 1947ರ ಆಗಸ್ಟ್ 15ರಂದು ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡು ಸ್ವಾತಂತ್ರ್ಯವನ್ನು ಪಡೆದುಕೊಂಡು, ಇಂದು 79ನೇ ವರ್ಷವನ್ನು ಪೂರೈಸಿದೆ. ದೇಶದಾದ್ಯಂತ ತ್ರಿವರ್ಣ ಧ್ವಜಗಳು ಹಾರಾಡುತ್ತಿದ್ದು, ಗರ್ವ, ಸಂತೋಷ ಮತ್ತು ದೇಶಭಕ್ತಿಯ ವಾತಾವರಣ ಮನೆಮಾಡಿದೆ. ಬೆಳಗ್ಗೆಯಿಂದಲೇ ಶಾಲೆ-ಕಾಲೇಜು, ಸರ್ಕಾರಿ ಕಚೇರಿ, ಗ್ರಾಮ-ನಗರಗಳ ಎಲ್ಲೆಡೆ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯ ದಿನವು ಕೇವಲ ಹಬ್ಬವಲ್ಲ, ಅದು ದೇಶಕ್ಕಾಗಿ ತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆ, ಸಂವಿಧಾನದ ಮೌಲ್ಯಗಳ ಪಾಲನೆ ಹಾಗೂ ರಾಷ್ಟ್ರ ನಿರ್ಮಾಣದ ಸಂಕಲ್ಪ ದಿನವಾಗಿದೆ. ಈ ದಿನದ ಅಂಗವಾಗಿ ದೇಶದಾದ್ಯಂತ ಮೆರವಣಿಗೆ, ಪಥಸಂಚಲನ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ.
ಅಂಕೋಲಾದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. ತಾಲೂಕಿನ ದಂಡಾಧಿಕಾರಿಗಳು, ಪುರಸಭೆ ಅಧಿಕಾರಿಗಳು, ಸದಸ್ಯರು, ರಾಜಕೀಯ ಮುಖಂಡರು, ಸಾಹಿತಿಗಳು. ಇವರೆಲ್ಲ ಒಂದೆಡೆ ಸೇರಿ ಅಂಕೋಲಾ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಒಂದು ಸುತ್ತು ಮೆರವಣಿಗೆ ಸಾಗಿದರು.ಈ ಮೆರವಣಿಗೆ ಜೊತೆ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಪತ ಸಂಚಲನ ನಡೆಸಿ“ಭಾರತಾಂಬೆಗೆ ಜೈ” ಘೋಷಣೆ ಕೂಗಿದರು.. ಕೊನೆಗೆ ಈ ಮೆರವಣಿಗೆ ಅಂಕೋಲ ಪುರಸಭೆ ಆವರಣಕ್ಕೆ ಬಂದು ತಲುಪಿತು.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಯಲ್ಲಿ ಅಂಕೋಲಾ ಠಾಣೆಯ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸರು ಶಿಸ್ತು ಮತ್ತು ಭದ್ರತೆ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿದರು. ಮೆರವಣಿಗೆಯ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲು ಹಾಗೂ ಜನಸಮೂಹದಲ್ಲಿ ಶಾಂತಿ ಕಾಪಾಡಲು ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.ಪುರಸಭೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರಗಿದ್ದು, ಪುರಸಭೆಯ ಅಧ್ಯಕ್ಷ ಸೂರಜ್ ಮನೋಹರ ನಾಯ್ಕ ಅವರು ಧ್ವಜಾರೋಹಣ ನೆರವೇರಿಸಿದರು. ಜೈ ಹಿಂದ್ ಹೈ ಸ್ಕೂಲ್ ವಿದ್ಯಾರ್ಥಿಗಳ ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿದರು.
ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಸೂರಜ್ ನಾಯ್ಕ ಅವರು,
“ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾಸಾಗರವರೆಗೂ ಹರಡಿರುವ ಭಾರತವು ಪ್ರೀತಿ, ವಿಶ್ವಾಸ, ಸ್ನೇಹ ಸೌಹಾರ್ದತೆ ಮತ್ತು ಮಾನವೀಯತೆಗೆ ಮಾದರಿಯಾದ ದೇಶ. ಬ್ರಿಟಿಷರ ದಾಸ್ಯದಿಂದ ತ್ಯಾಗ-ಬಲಿದಾನಗಳ ಮೂಲಕ ಮುಕ್ತಿಯಾದ ನಮ್ಮ ದೇಶ ಇಂದು ಜಗತ್ತಿನ ಪ್ರಭಾವಿ ರಾಷ್ಟ್ರಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಹೋರಾಟದ ಕರ್ಮಭೂಮಿಯಾದ ಅಂಕೋಲಾದ ಹೋರಾಟಗಾರರು ನಮ್ಮೆಲ್ಲರಿಗೂ ಸ್ಪೂರ್ತಿ. ಈ ಬಾರಿ ತಾಲೂಕಿನಲ್ಲಿ ಅತಿವೃಷ್ಟಿ-ಅನಾಹುತ ಗಳಿಲ್ಲದಿರುವುದು ಸಮಾಧಾನಕರ, ಆದರೆ ರಾಷ್ಟ್ರ ಮಟ್ಟದಲ್ಲಿ ತಾಲೂಕಿಗೆ ಮೆರಗು ತಂದಿದ್ದ ಇಬ್ಬರು ಪದ್ಮಶ್ರೀ ಪುರಸ್ಕೃತರನ್ನು ಕಳೆದುಕೊಂಡಿರುವುದು ದುಃಖಕರ,” ಎಂದು ಹೇಳಿದರು.
“ಅಂಕೋಲಾ ಪಟ್ಟಣದಲ್ಲಿ ಸ್ವಚ್ಛತೆ, ಸ್ವಾವಲಂಬನೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ. ಸ್ವಾತಂತ್ರ್ಯದ ಆಶಯಗಳಿಗೆ ಅನುಗುಣವಾಗಿ ಒಂದಾಗಿ ಬಾಳೋಣ, ಸಂವಿಧಾನದ ನಿಯಮಗಳನ್ನು ಪಾಲಿಸೋಣ, ಸ್ವಾತಂತ್ರ್ಯದ ಹೋರಾಟದ ಬಗ್ಗೆ ತಿಳಿದುಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸೋಣ” ಎಂದು ಅವರು ಕರೆ ನೀಡಿದರು..
ವರದಿ: ಕಿರಣ ಚಂದ್ರಹಾಸ ಗಾಂವಕರ

