
ಬೆಂಗಳೂರು, (ಮೇ 23): ಸಾರ್ವಜನಿಕರಿಗೆ ಹೆಚ್ಚು ಸೌಲಭ್ಯ ಒದಗಿಸಲು ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳು ಈ ವರ್ಷದ ಜೂನ್ 1ರಿಂದ ಡಿಸೆಂಬರ್ 28ರವರೆಗೆ ಪ್ರತಿಯೊಂದು 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಲ್ಲೂ ಕಾರ್ಯನಿರ್ವಹಿಸಲಿವೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರು ಪ್ರಕಟಿಸಿದ್ದಾರೆ.
ಈ ನಿಗದಿತ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ತಕ್ಷಣದ ಮುಂದಿನ ಮಂಗಳವಾರ ರಜೆ ನೀಡಲಾಗುತ್ತದೆ. ಈ ಕ್ರಮದಿಂದ ಕಾರ್ಯಭಾರ ತೀವ್ರವಾಗಿರುವ ಉಪನೋಂದಣಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇದಕ್ಕಾಗಿ ಪ್ರತಿಯೊಂದು ಜಿಲ್ಲಾ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಕಚೇರಿಗಳಲ್ಲಿ ಆದೇಶ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಅಲ್ಲದೇ, ‘ಎನಿವೇರ್ ನೋಂದಣಿ’ ವ್ಯವಸ್ಥೆ ಜಾರಿಯಲ್ಲಿರುವುದರಿಂದ, ನಿಗದಿತ ದಿನಗಳಲ್ಲಿ ಸಾರ್ವಜನಿಕರು ಜಿಲ್ಲೆಯ ಯಾವುದೇ ಸ್ವತ್ತುಗಳನ್ನು ಯಾವುದೇ ಕಚೇರಿಯಲ್ಲಿ ನೋಂದಾಯಿಸಬಹುದಾಗಿದೆ.
ಇದನ್ನು ಜನ ಸಾಮಾನ್ಯರಿಗೆ ತಿಳಿಸಲು ಎಲ್ಲಾ ಕಛೇರಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರವನ್ನು ನಡೆಸುವಂತೆ ಸೂಚಿಸಲಾಗಿದೆ.

