ಅಂಕೋಲಾ: ಕಳೆದ ಹಲವು ದಿನಗಳಿಂದ ಉರಿಯುವ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಅಂಕೋಲಾ ತಾಲೂಕಿನ ಜನತೆಗೆ ಇಂದು ಸ್ವಲ್ಪ ತಂಪಿನ ಅನುಭವ ಸಿಕ್ಕಿದೆ. ಅಂಕೋಲಾ ತಾಲೂಕಿನ ಹಲವೆಡೆ ಅಚಾನಕ್ ಮಳೆ ಸುರಿದಿದ್ದು, ಬಿಸಿಲಿನ ತೀವ್ರತೆಯಿಂದ ಬೇಸತ್ತಿದ್ದ ಜನರು ಉರಿ ಬಿಸಿಲಿನಿಂದ ಸ್ವಲ್ಪ ಮಟ್ಟಿಗೆ ಬಿಡುಗಡೆ ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಅಕಾಲಿಕ ಮಳೆ ಉಂಟಾಗಿದೆ. ಕೆಲವೆಡೆ ಉತ್ತಮ ಮಳೆಯಾದರೆ, ಇನ್ನೂ ಕೆಲವು ಕಡೆ ತುಂತುರು ಮಳೆ ಸುರಿದಿದೆ. ಮಳೆಯ ಪರಿಣಾಮವಾಗಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಆದರೆ ಈ ಅಕಾಲಿಕ ಮಳೆ ರೈತರಿಗೆ, ವಿಶೇಷವಾಗಿ ಮಾವು ಬೆಳೆಗಾರರಿಗೆ ಆತಂಕ ಉಂಟುಮಾಡಿದೆ. ಅಂಕೋಲಾ ತಾಲೂಕಿನ ಹಲವೆಡೆ ಮಾವಿನ ತೋಟಗಳು ಈಗ ಹೂಬಿಟ್ಟಿದ್ದು, ಕೆಲವು ಕಡೆ ಕಾಯಿ ಬಿಡುವ ಹಂತದಲ್ಲಿವೆ. ಈ ಸಮಯದಲ್ಲಿ ಮಳೆ ಬಿದ್ದರೆ ಹೂವುಗಳು ಉದುರುವ ಸಾಧ್ಯತೆ ಇದ್ದು, ಕಾಯಿ ಬಿಡುವ ಪ್ರಮಾಣ ಕಡಿಮೆಯಾಗುವ ಭೀತಿ ಇದೆ. ಇದರಿಂದ ಮುಂದಿನ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ರೈತರ ಚಿಂತೆಗೆ ಕಾರಣವಾಗಿದೆ.

ಮಾವು ಬೆಳೆಗಾರರು ಈಗಾಗಲೇ ಈ ವರ್ಷದ ಬೆಳೆ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಹವಾಮಾನದಲ್ಲಿ ಆಗಿರುವ ಈ ತಕ್ಷಣದ ಬದಲಾವಣೆ, ಅವರ ಆಶೆಗೆ ನೀರು ಎರಚುವ ಪರಿಸ್ಥಿತಿಯನ್ನುಂಟು ಮಾಡಿದೆ. ಮಳೆಯ ಜೊತೆಗೆ ಗಾಳಿಯು ಹೆಚ್ಚಾದರೆ, ಹೂವುಗಳು ಮತ್ತು ಕಾಯಿ ಉದುರುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬುದು ತೋಟಗಾರರ ಆತಂಕವಾಗಿದೆ.
ಇನ್ನು ಕೆಲ ರೈತರು ಮಳೆ ನೀರು ಮಣ್ಣಿಗೆ ತೇವ ನೀಡಿದ ಕಾರಣ ಕೆಲವು ಬೆಳೆಗಳಿಗೆ ಇದು ಸಹಾಯಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮಾವು ಬೆಳೆ ವಿಷಯಕ್ಕೆ ಬಂದಾಗ ಈ ಮಳೆ ಹಾನಿಕಾರಕವಾಗಬಹುದು ಎನ್ನುವುದು ಸಾಮಾನ್ಯ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ, ಬಿಸಿಲಿನ ತೀವ್ರತೆಯಿಂದ ಬೇಸತ್ತಿದ್ದ ಜನತೆಗೆ ಮಳೆ ತಂಪಿನ ಅನುಭವ ನೀಡಿದರೂ, ಮಾವು ಬೆಳೆಗಾರರಲ್ಲಿ ಆತಂಕವನ್ನು ಹೆಚ್ಚಿಸಿರುವುದು ಗಮನಾರ್ಹವಾಗಿದೆ.
ವರದಿ: ಚಂದನ್ ನಾಯ್ಕ, ಅಂಕೋಲಾ

