ನೆಲಮಂಗಲದ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ಕರ್ನಾಟಕ ರಣಧೀರರ ವೇದಿಕೆ ವತಿಯಿಂದ 6ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ತಾಯಿ ಭುವನೇಶ್ವರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದ ರಾಜಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಬೆಳ್ಳಿ ಪಲ್ಲಕ್ಕಿ ಉತ್ಸವದ ನಂತರ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಶ್ರೀ ಹನುಮಂತನಾಥ ಸ್ವಾಮೀಜಿ ಹಾಗೂ ಶ್ರೀ ಬಸವ ರಮಾನಂದ ಸ್ವಾಮೀಜಿಗಳು ಜಂಟಿಯಾಗಿ ಚಾಲನೆ ನೀಡಿದರು.

ಕಾರ್ಯಕ್ರಮದ ಪ್ರಮುಖವಾಗಿ ಭಾಗವಹಿಸಿದ್ದ ನಟ ಚೇತನ್ ಅಹಿಂಸಾ ಮಾತನಾಡಿ, “ಜಾತಿ-ಧರ್ಮ ನಮ್ಮ ಶತ್ರುವಲ್ಲ, ಅಸಮಾನತೆಯೇ ನಿಜವಾದ ಶತ್ರು. ಕನ್ನಡಿಗರು ಸಮ ಸಮಾಜವನ್ನು ಕಟ್ಟುವ ಮೂಲಕ ಆದರ್ಶ ಕರ್ನಾಟಕವನ್ನು ರೂಪಿಸಬೇಕು,” ಎಂದು ಕರೆ ನೀಡಿದರು.
ವೇದಿಕೆಯ ರಾಜ್ಯಾಧ್ಯಕ್ಷರು ಕೆ.ಆರ್. ಶಂಕರ್ ಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯ ಹೋರಾಟ ಮತ್ತು ಮುಂದಿನ ಗುರಿಗಳನ್ನು ವಿವರಿಸಿದರು. ಸಮಾರಂಭದಲ್ಲಿ ಶಾಸಕ ಎನ್. ಶ್ರೀನಿವಾಸ್, ಡಾ. ಕೆ. ನಾಗಣ್ಣ, ನಾಹೀದ ಜಮ್ ಜಮ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ವಿಶೇಷವಾಗಿ ಶ್ರೀ ಬಸವ ರಮಾನಂದ ಸ್ವಾಮೀಜಿಗಳಿಗೆ ‘ಬಸವ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಸಮಾಜ ಸೇವಕ ಹುಲ್ಲೂರು ಮಂಜುನಾಥ್, ಪಬ್ಲಿಕ್ ಟಿವಿಯ ಅರುಣ್ ಸಿ. ಬಡಿಗೇರ್ ಹಾಗೂ ಬಾಲನಟಿ ಕುಮಾರಿ ಭೈರವಿ ಅವರಿಗೆ 2025ರ ‘ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಸೂರಜ್, ತಿಮ್ಮಪ್ಪ ಗೌಡ (ಚಿನ್ನು), ಸುಪ್ರಿಯಾ, ಐಶ್ವರ್ಯ , ದೇವರಾಜ್, ಮಂಜುಸ್ವಾಮಿ ಎಂ.ಎನ್, ಲೋಕೇಶ್, ಸಮೀರ್, ರವಿ, ಮುತ್ತುರಾಜ್, ಭೈರವ, ಮಹೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

