ಅಂಕೋಲಾ: ಕೇಣಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿರೋಧವಾಗಿ ಹೋರಾಟ ಸಮಿತಿಯು ನವೆಂಬರ್ 25ರಂದು ಅಂಕೋಲಾ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ಸಂಘವು ಈ ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿದೆ.
ಹೋರಾಟಗಾರರ ಅಭಿಪ್ರಾಯದಂತೆ, ಕೇಣಿ ಬಂದರು ಯೋಜನೆ ಮೀನುಗಾರಿಕೆ ಕ್ಷೇತ್ರವನ್ನೇ ಮಾತ್ರವಲ್ಲದೇ ಕೃಷಿ, ಪರಿಸರ, ಜಲಮೂಲಗಳು, ಸ್ಥಳೀಯ ಜನಜೀವನ ಮತ್ತು ಆರೋಗ್ಯದ ಮೇಲೆ ದೀರ್ಘಕಾಲೀನ ಹಾನಿಕರ ಪರಿಣಾಮ ಬೀರುವ ಸಾಧ್ಯತೆ ಇದೆ. “ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾಗಿರುವ ಈ ಯೋಜನೆ ಜನರಿಗೆ ಅಪಾಯ ಎನ್ನುವುದು ಸ್ಪಷ್ಟವಾಗಿದ್ದು, ಸಮಿತಿಯ ಹೋರಾಟಕ್ಕೆ ನಾವು ನೈತಿಕವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಬೆಂಬಲಿಸುತ್ತೇವೆ” ಎಂದು ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಪರಿಸರ ಮತ್ತು ಶಾಶ್ವತ ಬದುಕಿನ ಪರ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ ಹೆಚ್ಚುತ್ತ ಬರುತ್ತಿರುವುದು ಗಮನಾರ್ಹ. ಕೇಣಿ ಬಂದರಿಗೆ ವಿರೋಧದ ಕ್ರಿಯಾಶೀಲತೆಗೆ ಈಗ ಸಾಮಾಜಿಕ, ಮೀನುಗಾರ ಸಮುದಾಯ, ರೈತ ಮತ್ತು ಪತ್ರಕರ್ತ ವಲಯಗಳೂ ಒಂದು ಗೂಡುತ್ತಿರುವುದು ಜಿಲ್ಲೆಯ ಹೋರಾಟಕ್ಕೆ ಹೊಸ ತಿರುವು ನೀಡುವಂತಾಗಿದೆ.
ವರದಿ: ಕಿರಣ ಗಾಂವಕರ

