ಅಂಕೋಲಾ, ಜುಲೈ 22: ಅಂಕೋಲಾ ಪುರಸಭೆ ವ್ಯಾಪ್ತಿಯ ಶೆಡಗೇರಿ ಗ್ರಾಮದ ಸರ್ವೆ ನಂ. 80ಬ, . 0-01-06 ಜಾಗೆಯು ಪಹಣಿಯಲ್ಲಿ “ರಸ್ತೆಗೆ ಸೇರಿದ ಜಾಗ” ಎಂದು ನಮೂದಾಗಿದೆ. ಆದರೆ ಈ ಜಾಗದಲ್ಲಿ ಕೆಲವರು ಅನಧಿಕೃತವಾಗಿ ಶೆಡ್ ಕಟ್ಟಿದ್ದಾರೆ ಎಂಬ ಆರೋಪ ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದನ್ನು ತೆರವುಗೊಳಿಸಬೇಕೆಂದು ಕೋಟೆವಾಡ ನಿವಾಸಿ ಹಾಗೂ ಪಿಡಬ್ಲ್ಯೂಡಿ ಗುತ್ತಿಗೆದಾರ ಸಂಜೀವ್ ಪಿ. ನಾಯ್ಕ್ ಅವರು ಹಲವು ವರ್ಷಗಳಿಂದ ಅಧಿಕಾರಿಗಳ ಬಳಿ ದೂರು ನೀಡುತ್ತಾ ಒಬ್ಬಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ.
2024ರ ಡಿಸೆಂಬರ್ 10ರಂದು ಈ ಜಾಗದ ಗಡಿ ಗುರುತಿಸಲು ಮತ್ತು ಅಳತೆ ಮಾಡಲು ಭೂಮಾಪನ ಇಲಾಖೆಯಿಂದ ನೋಟಿಸ್ ಬಂದರೂ, ಅಳತೆ ಆಗದೆ ಮುಂದೂಡ ಲಾಗಿತ್ತು. ನಂತರ ಜುಲೈ 4, 2025 ರಂದು ಅವರು ಖುದ್ದಾಗಿ ಅಂಕೋಲಾ ಭೂ ಮಾಪಕ ನೋರ್ವನ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.ಅದರ ಬಳಿಕ ಭೂಮಾಪನ ಇಲಾಖೆ ಜುಲೈ 21, 2025 ರಂದು ಸರ್ವೆ ಮಾಡುವುದಾಗಿ ನಿಗದಿ ಮಾಡಿ,ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಿಗೆ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗೆ ನೋಟಿಸ್ ಮುಖಾಂತರ ಮಾಹಿತಿ ನೀಡಲಾಗಿತ್ತು. ಸಂಜೀವ್ ನಾಯ್ಕ್ ಅವರು ಅದೇ ದಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಸರ್ವೆ ವೇಳೆ ಯಾವುದೇ ಗಲಾಟೆ ನಡೆದರೆ ತಡೆಗಟ್ಟಲು ಪೊಲೀಸ್ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು. ತಹಶೀಲ್ದಾರ್ ಅವರು ಇದನ್ನು ಗಮನಿಸಿ ಪೋಲೀಸ್ ಇಲಾಖೆಗೆ ಪತ್ರ ಬರೆದು ಸಿಬ್ಬಂದಿಗಳನ್ನು ಸ್ಥಳಕ್ಕೆ ನಿಯೋಜಿಸಲು ಸೂಚಿಸಿದ್ದರು.
ನಿನ್ನೆ ದಿನಾಂಕ 21-07-2025ರಂದು ಬೆಳಿಗ್ಗೆ 10:30ಕ್ಕೆ ಪುರಸಭೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ್, . ಸ್ಥಳೀಯ ಹೂವ ಕಂಡೇಕರ್ ಇನ್ನಿತರರು ಹಾಗೂ ಅರ್ಜಿದಾರ ಸಂಜೀವ್ ನಾಯ್ಕ್ ಸ್ಥಳದಲ್ಲಿ ಹಾಜರಿದ್ದರೂ, ಆದರೆ ಭದ್ರತೆ ನೀಡಬೇಕಾದ ಪೋಲೀಸರು ಆಗಮಿಸಲೇ ಇಲ್ಲ. ಈ ವಿಷಯ ಸಂಬಂಧ ಸಂಜೀವ್ ನಾಯ್ಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರ ನಿರೀಕ್ಷೆಯಂತೆ ಸರ್ವೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ಭೂಮಾಪಕ ಪ್ರಶಾಂತ್ ಶೇಟ್ ಅವರು, “ಈ ಜಾಗಕ್ಕೆ ನಕ್ಷೆ ಇಲ್ಲ, ಆಕಾರದ ಬಂದ್ ದಾಖಲೆ ಇಲ್ಲ. ಈ ಸ್ಥಿತಿಯಲ್ಲಿ ನಾನು ಅಳತೆ ಮಾಡಲಾಗದು,” ಎಂದು ಹೇಳಿದಾಗ, ಎಲ್ಲರೂ ನಿರಾಶರಾದರು. ಈ ವಿಷಯವನ್ನು ಸರ್ವೆ ಇಲಾಖೆಯವರು ಆಗಲೇ ತಿಳಿಸಬೇಕಿತ್ತು ಎಂಬ ಬೇಸರ ಸ್ಥಳೀಯರಲ್ಲಿ ವ್ಯಕ್ತವಾಯಿತು.

ಹೀಗೆ, ಸರ್ವೆ ಇಲಾಖೆಯಿಂದ ಬಂದ ನೋಟಿಸ್, ಅಧಿಕಾರಿಗಳ ಹಾಜರಾತಿ, ಸ್ಥಳೀಯರ ಸಮಯ-ಎಲ್ಲವೂ ವ್ಯರ್ಥವಾಯಿತು. ಭೂಮಾಪಕರು ಈಗ ಅಳತೆ ಮಾಡಲಾಗದು ಎಂಬ ಕಾರಣದೊಂದಿಗೆ ಪಂಚನಾಮೆ ತಯಾರಿ ಮಾಡಿ ತಹಶೀಲ್ದಾರಿಗೆ ವರದಿ ಸಲ್ಲಿಸುತ್ತಿದ್ದಾರೆ.
ಈ ಸಂಬಂಧ ಸಂಜೀವ್ ನಾಯ್ಕ್ ಮಾತನಾಡುತ್ತಾ,
“ಪ್ರಭಾವಿಗಳ ಗುಂಪು ಕೋಟೆವಾಡದ ₹20 ಲಕ್ಷ ಮೌಲ್ಯದ ಸರ್ಕಾರಿ ರಸ್ತೆಯ ಜಮೀನನ್ನು ಕಬಳಿಸಲು ನೋಡುತ್ತಿದ್ದಾರೆ. ಪಹಣಿಯಲ್ಲಿ ಈ ಜಾಗ ಸರ್ಕಾರಿ ರಸ್ತೆಗೆ ಶಾಮಿಲು ಜೊತೆಗೆ ಪಹಣಿ ಪತ್ರಿಕೆಯ 11ನೇ ಕಾಲಂ ನಲ್ಲಿ ಬಿನಸೇತ್ಕಿ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಹಾಗಿದ್ದರೂ ಈ ಪಹಣಿ ಪತ್ರಿಕೆಗೆ ಆಕಾರ್ ಬಂದ್ ಹಾಗೂ ನಕ್ಷೆ ಇಲ್ಲ ಎಂದರೆ ಇದು ಅನುಮಾನವನ್ನು ಇನ್ನೂ ಹೆಚ್ಚಾಗಿ ಹುಟ್ಟು ಹಾಕುತ್ತದೆ?. ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಸಂಬಂಧಪಟ್ಟ ಅಧಿಕಾರಿಗಳ್ ವಿರುದ್ಧ ಸದರಿ ಜಾಗೆಯ ಒತ್ತುವರಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇನೆ. ತಹಶೀಲ್ದಾರ ಆದೇಶಕ್ಕೂ ಬೆಲೆ ಕೊಡದೆ ಭದ್ರತೆ ಒದಗಿಸದೆ ಕರ್ತವ್ಯ ಲೋಪ ತೋರಿದ ಪೋಲಿಸ್ ಅಧಿಕಾರಿಗಳಿಗೆ ಶ್ರೀ ವೆಂಕಟರಮಣ ದೇವರು ಒಳ್ಳೆ ಬುದ್ಧಿ ಕೊಡಲಿ,” ಎಂದು ಇದೇ ಸಂದರ್ಭದಲ್ಲಿ ಕಿಡಿಕಾರಿದರು.
ವರದಿ: ಕಿರಣ ಚಂದ್ರಹಾಸ ಗಾಂವಕರ

