ಅಂಕೋಲಾ, ಅ 21: ಕಾನಬೀರವಾಡ ಭಾವಿಕೇರಿಯ ನಿವಾಸಿ, 51 ವರ್ಷದ ಕ್ರಷಿಕರಾಗಿದ್ದ ಆನಂದು ನಾಯ್ಕ ಕಾಣೆಯಾಗಿದ್ದ ಪ್ರಕರಣದಲ್ಲಿ ನಿನ್ನೆ ರಾತ್ರಿ ಅಂಕೋಲಾ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ ನಂತರ ಇಂದು ಬೆಳಗ್ಗೆ ಬೆಲೇಕೇರಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ ಎಂದು ಮಾಹಿತಿ ಲಭಿಸಿದೆ.
ಪೊಲೀಸರು ನೀಡಿದ ಪ್ರಕಟಣೆಯ ಪ್ರಕಾರ, ಫಿರ್ಯಾದುದಾರರಾದ ವಿನಯ ನಾಯ್ಕ (19) ಎಂಬವರು ನಿನ್ನೆ ರಾತ್ರಿ ಅಂಕೋಲಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ತಮ್ಮ ತಂದೆ ಆನಂದು ನಾಯ್ಕ ಅವರು ಅಕ್ಟೋಬರ್ 20ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ “ಚಿಪ್ಪಿ ಕಲ್ಲು ಆರಿಸಲು ಹೋಗುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಮರಳಿ ಮನೆಗೆ ಬಾರದಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಂ: 194/2025 ರಂತೆ ಮನುಷ್ಯ ಕಾಣೆಯಾದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಇಂದು ಸಂಜೆ 4:30ಕ್ಕೆ ಬೆಲೇಕೇರಿ ಸಮುದ್ರ ತೀರದಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ, ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆ ಅಧಿಕಾರಿಗಳು ಶವವನ್ನು ದಡ್ಡಕ್ಕೆ ತರಲು ನೆರವಾದರು.
ಅಂಕೋಲಾ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಪೊಲೀಸರು ಶವದ ಗುರುತನ್ನು ದೃಢಪಡಿಸಿದ್ದು, ಶವವನ್ನು ಮುಂದಿನ ಕಾನೂನಾತ್ಮಕ ಕ್ರಮಗಳಿಗಾಗಿ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ವರದಿ: ಕಿರಣ ಗಾಂವಕರ

