ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಮುಡಾ ಸಂಕಷ್ಟ: ಅಕ್ರಮ ಡಿನೋಟಿಫಿಕೇಶನ್ ಆರೋಪದಲ್ಲಿ ರಾಜ್ಯಪಾಲರಿಗೆ ಬಿಜೆಪಿ ದೂರು

bluechipinfosystem
2 Min Read

ಮುಡಾ ಹಗರಣ ಸಂಬಂಧ ಮೈಸೂರಿನ ಕೆಸರೆ ಗ್ರಾಮದ ಜಮೀನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಲೋಕಾಯುಕ್ತ ತನಿಖಾ ವರದಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್​​ಚಿಟ್ ನೀಡಲಾಗಿದೆ. ಆದರೆ, ಅಧಿಕಾರಿಗಳು ತಪ್ಪೆಗಿರುವುದು ದೃಢಪಟ್ಟಿದೆ ಲೋಕಾಯುಕ್ತ ತನಿಖಾ ವರದಿ ಹೇಳಿದೆ. ಸದ್ಯ ರಿಲೀಫ್ ಮೂಡ್​​ನಲ್ಲಿರುವ ಸಿದ್ದರಾಮಯ್ಯಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು? ವಿವರಗಳಿಗೆ ಮುಂದೆ ಓದಿ.

ಬೆಂಗಳೂರು, ಫೆಬ್ರವರಿ 20: ಮೈಸೂರಿನ ಕೆಸರೆ ಗ್ರಾಮದ ಜಮೀನಿಗೆ ಸಂಬಂಧಪಟ್ಟಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪದಿಂದ ಸಿಎಂ ಸಿದ್ದರಾಮಯ್ಯ (CM Siddaramaiah) ಬಚಾವಾಗಿದ್ದಾರೆ. ಹಗರಣದ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯಗೆ ಕ್ಲೀನ್​ಚಿಟ್ ನೀಡಿದ್ದಾರೆ. ಆದರೆ, ಮುಡಾಕ್ಕೆ ಸಂಬಂಧಿಸಿದ ಮತ್ತೊಂದು ಹಗರಣದಲ್ಲಿ ಈಗ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುಡಾ ಆಸ್ತಿಯ ಅಕ್ರಮ ಡಿನೋಟಿಫಿಕೇಶನ್ ಸಂಬಂಧ ಸಿದ್ದರಾಮಯ್ಯ ಹಾಗೂ ಬಸವೇಗೌಡ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಎನ್​ಆರ್ ರಮೇಶ್ (NR Ramesh) ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.

ಏನಿದು ಹೊಸ ಮುಡಾ ಪ್ರಕರಣ?

ವಿಜಯನಗರ ಎರಡನೇ ಹಂತದ ಬಡಾವಣೆ ನಿರ್ಮಾಣ ಮಾಡುವುದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮೈಸೂರಿನ ಹಿಣಕಲ್ ಗ್ರಾಮದ ಸರ್ವೆ ನಂಬರ್ 70/4 ಎ ಜಾಗವನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಭೂಮಿಯನ್ನು ಡಿ ನೋಟಿಫಿಕೇಶನ್ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಉಲ್ಲಂಘಿಸಿದ್ದಾರೆ. ಅಲ್ಲದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಭ್ರಷ್ಟಾಚಾರವಾಗಿದೆ ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ರಮೇಶ್ ಉಲ್ಲೇಖಿಸಿದ್ದಾರೆ.

ಎನ್​ಆರ್ ರಮೇಶ್ ರಾಜ್ಯಪಾಲರಿಗೆ ಬರೆದ ಪತ್ರದ ಪ್ರತಿ

Nr Rsmesh Letter Copy

1985ರಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಮುಡಾ ಮೂಲ ಮಾಲೀಕರಿಗೆ ಹಣ ನೀಡಿತ್ತು.

ಪ್ಲಾಟ್ ನಂ 3161 ಸೇರಿದಂತೆ ಕಾನೂನಿನ ಪ್ರಕಾರ ಸ್ವಾಧೀನಪಡಿಸಿಕೊಂಡ ಭೂಮಿಯಿಂದ ವಿವಿಧ ಅರ್ಜಿದಾರರಿಗೆ ಮುಡಾ ನಿಗದಿಪಡಿಸಿದ ಪ್ಲಾಟ್‌ಗಳನ್ನು ಸುಂದರ್ ರಾಜ್ ಎಂಬವರಿಗೆ ನೀಡಲಾಗಿತ್ತು. ಅವರು ಅನುಮೋದನೆಗಳನ್ನು ಪಡೆದ ನಂತರ ಮನೆ ನಿರ್ಮಿಸಿದ್ದರು. ಆದಾಗ್ಯೂ, ಕಾನೂನು ಅವಶ್ಯಕತೆಗಳನ್ನು ಅನುಸರಿಸಿದರೂ, ಅವರ ಮನೆಯನ್ನು ಕಾನೂನುಬಾಹಿರವಾಗಿ ನೆಲಸಮ ಮಾಡಲಾಯಿತು. ಇದು ಆಸ್ತಿ ಹಕ್ಕುಗಳ ಉಲ್ಲಂಘನೆ ಮತ್ತು ಸರಿಯಾದ ಪ್ರಕ್ರಿಯೆಯ ಬಗ್ಗೆ ಗಂಭೀರ ಕಳವಳ ಮೂಡಿಸಿತ್ತು ಎಂದು ಎನ್​ಆರ್ ರಮೇಶ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಧಿಸೂಚನೆಯ ವಿರುದ್ಧದ ಸ್ಪಷ್ಟ ತೀರ್ಪಿನ ಹೊರತಾಗಿಯೂ, ಡಿಇ -23/10/1997 ರಂದು, ಅಂದಿನ ಮುಡಾ ಅಧ್ಯಕ್ಷ ಸಿ. ಬಸವೇಗೌಡ ಅವರು ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ, ಎಲ್ಲಾ ಶಾಸನಬದ್ಧ ಮಾನದಂಡಗಳನ್ನು ಉಲ್ಲಂಘಿಸಿ ಸರ್ವೇ ನಂಬರ್ 70/4 ಎ ಗಾಗಿ ಅಕ್ರಮ ಡಿ-ನೋಟಿಫಿಕೇಶನ್ ಆದೇಶವನ್ನು ನೀಡಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಸಿದ್ದರಾಮಯ್ಯ ವಿರುದ್ಧದ ಆರೋಪವೇನು?

ಈ ಡಿನೋಟಿಫಿಕೇಶನ್ ಆದ ಕೇವಲ 27 ದಿನಗಳ ನಂತರ, 26/11/1997 ರಂದು, ಆ ಸಮಯದಲ್ಲಿ ಉಪ ಮುಖ್ಯಮಂತ್ರಿ, ಹಣಕಾಸು ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಪ್ಲಾಟ್ ಸಂಖ್ಯೆ 3161 (80×120 ಅಡಿ, 9,600 ಚದರ ಅಡಿ) ಅನ್ನು ಸಂಕಮ್ಮ ಎಂಬವರಿಂದ 6.72 ಲಕ್ಷ ರೂ.ಗೆ ಖರೀದಿಸಿದ್ದರು. ಮುಡಾ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡ 12 ವರ್ಷಗಳ ನಂತರ ಈ ವ್ಯವಹಾರ ನಡೆದಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ವಾಷಿಂಗ್ ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ: ಲೋಕಾಯುಕ್ತ ಕ್ಲೀನ್​ಚಿಟ್​ಗೆ ಅಶೋಕ್ ವ್ಯಂಗ್ಯ

ಸದ್ಯ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದಾರಷ್ಟೆ. ಅವರ ವಿರುದ್ಧ ತನಿಖೆಗೆ ಇನ್ನೂ ಅನುಮತಿ ದೊರೆತಿಲ್ಲ. ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿರಲಿವೆ.

Share This Article
Leave a Comment