ಮಿರ್ಜಾನ ಕೋಟೆ ರಸ್ತೆಗೆ ಗೇಟ್ ಅಳವಡಿಕೆ ನಿರ್ಧಾರ ಕೈಬಿಟ್ಟ ಪಂಚಾಯತ್ – ಗ್ರಾಮಸ್ಥರಿಗೆ ಲಿಖಿತ ಭರವಸೆ..

News Desk
1 Min Read

ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆ ರಸ್ತೆಯಲ್ಲಿ (ಛತ್ರಕೂರ್ವೆ ಗ್ರಾಮಕ್ಕೆ ತೆರಳುವ ಮಾರ್ಗ) ಅಕ್ರಮವಾಗಿ ಗೇಟ್ ಅಳವಡಿಸುವ ಪಂಚಾಯತ್ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಎಚ್ಚೆತ್ತ ಪಂಚಾಯತ್ ಆಡಳಿತವು ಗೇಟ್ ನಿರ್ಮಾಣ ನಿರ್ಧಾರವನ್ನು ಕೈಬಿಟ್ಟಿದೆ. ಈ ಕುರಿತು ಗ್ರಾಮಸ್ಥರಿಗೆ ಅಧಿಕೃತವಾಗಿ ‘ಹಿಂಬರಹ’ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.

ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯಲ್ಲಿ ಪ್ರವಾಸಿಗರಿಂದ ಸುಂಕ ವಸೂಲಿ ಮಾಡುವ ಉದ್ದೇಶದಿಂದ ಗೇಟ್ ಅಳವಡಿಸಲು ಪಂಚಾಯತ್ ಮುಂದಾಗಿತ್ತು. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಈ ಕುರಿತು ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವಿಸ್ತೃತ ವರದಿ ಪ್ರಕಟವಾಗಿ, ಇಲಾಖೆಯ ಗಮನ ಸೆಳೆಯಲಾಗಿತ್ತು.

ಮಾಧ್ಯಮ ವರದಿ ಹಾಗೂ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಮಿರ್ಜಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ದಿನಾಂಕ 17-02-2026 ರಂದು ಅಧಿಕೃತ ಹಿಂಬರಹ ನೀಡಿದ್ದಾರೆ.

ಪತ್ರದಲ್ಲಿ, “ಸಾರ್ವಜನಿಕ ಹಿತದೃಷ್ಟಿಯಿಂದ ಮಿರ್ಜಾನ ಕೋಟೆಯ ಹತ್ತಿರ ಛತ್ರಕೂರ್ವೆ ಮುಖ್ಯ ರಸ್ತೆಗೆ ಅಡ್ಡಲಾಗಿ ಯಾವುದೇ ಗೇಟ್ ಅಳವಡಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.”ನಮ್ಮೂರಿನ ರಸ್ತೆಗೆ ಗೇಟ್ ಹಾಕದಂತೆ ನಾವು ಮಾಡಿದ ಮನವಿಗೆ ಪಂಚಾಯತ್ ಸ್ಪಂದಿಸಿ ಲಿಖಿತ ಭರವಸೆ ನೀಡಿದೆ.

ಸಮಸ್ಯೆಯನ್ನು ಸಮಾಜಕ್ಕೆ ತಿಳಿಸಿ, ನ್ಯಾಯ ಒದಗಿಸಿಕೊಡಲು ಸಹಕರಿಸಿದ ಎಲ್ಲಾ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಿಗೆ ಛತ್ರಕೂರ್ವೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ,” ಎಂದು ವಿನಾಯಕ ಪಟಗಾರ, ದಾಮೋದ, ಲಕ್ಷಣ, ಲೋಕೇಶ, ಚೆನ್ನಪ್ಪ, ದಯಾನಂದ, ನವೀನ್ ಗ್ರಾಮದ ಪ್ರಮುಖರು ತಿಳಿಸಿದ್ದಾರೆ.

………………

Share This Article