“ಜಿಲ್ಲೆಯ ಸಂಗೀತ ಸ್ಪರ್ಧೆಯಲ್ಲಿ ನಿಯಮ ಉಲ್ಲಂಘನೆ–ಪಾರದರ್ಶಕತೆ ಕೊರತೆ: ನಿಜವಾದ ಪ್ರತಿಭೆಗಳ ಪರಿಶ್ರಮ ಮಣ್ಣಾಗಿಸಿದ ಆಯ್ಕೆ ಕ್ರಮ! ಇಂತಹ ಸ್ಪರ್ಧೆಗಳ ಮೇಲೆ ಕಲಾವಿದರ ನಂಬಿಕೆ ಉಳಿದೀತೇ?”

News Desk
2 Min Read

ಉತ್ತರ ಕನ್ನಡ : ಜಿಲ್ಲೆಯಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಈ ಬಾರಿ ಸಂಭ್ರಮಕ್ಕಿಂತ ವಿವಾದಗಳ ಮೂಲಕ ಹೆಚ್ಚಿನ ಗಮನ ಸೆಳೆದಿದೆ. ಆಡಿಷನ್ ಹಂತದಲ್ಲಿ 60ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು, ಅವರಲ್ಲಿ 22 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಈ ಪ್ರಕಾರ ಪ್ರಕಟಿಸಿದ ಯೋಜನೆಯಂತೆ, ಈ 22 ಮಂದಿಯಿಂದ ಮೊದಲು ಎಂಟು ಮಂದಿಯನ್ನು ಫೈನಲ್ ಗೆ ಆಯ್ಕೆ ಮಾಡಿ, ನಂತರ ಆ ಎಂಟು ಮಂದಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ನಿರ್ಧರಿಸಬೇಕಿತ್ತು. ಆದರೆ 22ರಿಂದ 8 ಮಂದಿಯನ್ನು ಆಯ್ಕೆ ಮಾಡಿದ ಹಂತವು ಸ್ಪರ್ಧೆಯ ನಿಷ್ಠೆ ಮತ್ತು ಪಾರದರ್ಶಕತೆಯ ಕುರಿತ ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿತು.

ಸ್ಪರ್ಧೆಗೆ ಚಾಲನೆ ನೀಡುವ ಮೊದಲು ಆಯೋಜಕರು ಜಾಹೀರಾತು ಮಾಡಿದ ಎರಡು ಪ್ರಮುಖ ನಿಯಮಗಳೇ— ಲಿರಿಕ್ಸ್ ನೋಡಿ ಹಾಡಬಾರದು ಮತ್ತು ಕನ್ನಡ ಚಲನಚಿತ್ರ ಗೀತೆಗಳನ್ನೇ ಹಾಡಬೇಕು—ವೇದಿಕೆಯಲ್ಲಿ ಸರಿಯಾಗಿ ಅನುಸರಿಸಲ್ಪಡಲಿಲ್ಲ ಎಂಬ ಅಸಮಾಧಾನ ಪ್ರೇಕ್ಷಕರಲ್ಲಿ ಸ್ಪಷ್ಟವಾಗಿ ಕಾಣಿಸಿತು. ಪ್ರಕಟಿಸಿದ ನಿಯಮಗಳಿದ್ದರೂ ಕೆಲವರು ಚಲನಚಿತ್ರ ಗೀತೆಗಳ ಬದಲಿಗೆ ಶರಣರ ಗೀತೆಗಳು ಅಥವಾ ಚಲನಚಿತ್ರ ಗೀತೆಗಳು ಬಿಟ್ಟು ಬೇರೆ ಹಾಡಿದರು, ಮತ್ತೂ ಕೆಲವರು ತಾವು ತಂದುಕೊಂಡಿದ್ದ ಲಿರಿಕ್ಸ್ ಕಾಗದವನ್ನೇ ನೋಡಿ ಹಾಡಿದರು. ವಿಶೇಷವೆಂದರೆ, ಈ ನಿಯಮ ಉಲ್ಲಂಘನೆಗಳಿರುವವರೇ ಅಂತಿಮ 8 ಮಂದಿಯ ಆಯ್ಕೆ ಪಟ್ಟಿಯಲ್ಲಿ ಕೆಲವರು ಕಾಣಿಸಿಕೊಂಡಿರುವುದು ಸ್ಪರ್ಧೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಯಿತು.

ಇನ್ನು ಇಲ್ಲಿನ ಮತ್ತೊಂದು ಗಂಭೀರ ಅಂಶವೆಂದರೆ—ನಿಯಮಗಳನ್ನು ಪ್ರಕಟಿಸಿದವರು ಸಂಘಟಕರು; ಅವುಗಳನ್ನು ನೋಡಿಕೊಂಡು ಅಂಕ ಹಾಕಬೇಕಾದವರು ಜಡ್ಜ್‌ಗಳು. ನಿಯಮವನ್ನು ಮೀರಿ ಹಾಡಿದವರಿಗೂ ಅಂಕ ನೀಡಲಾಗಿರುವುದು, “ಜಡ್ಜ್‌ಗಳ ಮೌಲ್ಯಮಾಪನ ವಿಧಾನವೇನು?”, “ನಿಯಮ ಇದ್ದಿದ್ದರೂ ಅನುಸರಿಸದ ಪ್ರದರ್ಶನಗಳನ್ನು ಹೇಗೆ ಮುಂದಿನ ಹಂತಕ್ಕೆ ಕಳುಹಿಸಿದರು?” ಎಂಬ ಪ್ರಶ್ನೆಗಳನ್ನು ಜನರ ಮಧ್ಯೆಯೇ ಎಬ್ಬಿಸಿತು. ಕಾರ್ಯಕ್ರ‍ಮದ ಪಾರದರ್ಶಕತೆಯ ಕುರಿತು ಹಲವರಲ್ಲಿ “ಮೊದಲೇ ಕೆಲವು ಹೆಸರುಗಳು ನಿಗದಿಯಾಗಿದ್ದವೋ?”, “ಫಿಕ್ಸಿಂಗ್‌ನ ಅನುಮಾನ ತಲೆದೋರಿದೆ” ಎಂಬ ಮಾತುಗಳು ಹರಿದಾಡಿದರೂ, ಇದು ಪ್ರೇಕ್ಷಕರ ವಲಯದಲ್ಲಿ ಮೂಡಿದ ಅಭಿಪ್ರಾಯವಾಗಿದ್ದು, ನೇರ ಆರೋಪವಾಗಿ ಪರಿಗಣಿಸಲಾಗುವುದಿಲ್ಲ.

ನಿಯಮಗಳನ್ನು ನೂರು ಪ್ರತಿಶತ ಪಾಲಿಸಿ ಕಂಠಪಾಠವಾಗಿ, ಲಯಬದ್ಧವಾಗಿ, ಮಧುರವಾಗಿ ಹಾಡಿದ ಅನೇಕ ಪ್ರತಿಭೆಗಳು 8 ಮಂದಿಯ ಪಟ್ಟಿಯಿಂದ ಹೊರಗುಳಿದಿರುವುದು ಅವರಲ್ಲಿ ಮಾತ್ರವಲ್ಲ, ಪ್ರೇಕ್ಷಕರಲ್ಲೂ ತೀವ್ರ ನಿರಾಸೆ ಉಂಟುಮಾಡಿತು. ಪ್ರತಿಭೆಗಳನ್ನು ಉತ್ತೇಜಿಸುವ ವೇದಿಕೆ ಆಗಬೇಕಿದ್ದ ಸ್ಥಳದಲ್ಲಿ, ನಿಯಮ–ಅನುಷ್ಠಾನದ ವ್ಯತ್ಯಾಸ ಮತ್ತು ಮೌಲ್ಯಮಾಪನದ ಅಸ್ಪಷ್ಟತೆ ಯುವ ಪ್ರತಿಭೆಗಳ ಕನಸುಗಳಿಗೆ ಬಿರುಕು ತಂದಂತಾಯಿತು. “ಇಂತಹ ವೇಳೆಗಳಲ್ಲಿ ನಿಜವಾದ ಪ್ರತಿಭೆಗೆ ಅವಕಾಶ ಎಲ್ಲಿದೆ?”, “ಸ್ಪರ್ಧೆಯ ಮೇಲೆ ನಂಬಿಕೆ ಇಟ್ಟು ಮತ್ತೆ ವೇದಿಕೆಗೆ ಯಾರು ಬರುತ್ತಾರೆ?” ಎಂಬ ಪ್ರಶ್ನೆಗಳು ಅನೇಕರ ಬಾಯಲ್ಲಿ ಕೇಳಿಬಂತು.

ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲೆಯ ಯುವ ಪ್ರತಿಭೆಗೆ ಉದಾಹರಣೆಯಾಗ ಬೇಕಾಗಿರುವಾಗ, ಈ ರೀತಿಯ ಗೊಂದಲಗಳು ಕಾರ್ಯಕ್ರಮದ ಗೌರವವನ್ನು ಕುಂದಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ನಿಜವಾದ ಕಲಾವಿದರಿಗೆ ನ್ಯಾಯವಾಗ ಬೇಕಾದರೆ, ನಿಯಮಗಳ ಸ್ಪಷ್ಟ ಅನುಸರಣೆ, ಜಡ್ಜ್‌ಗಳ ನಿಷ್ಪಕ್ಷಪಾತತೆ ಮತ್ತು ಮೌಲ್ಯಮಾಪನದಲ್ಲಿ ಪಾರದರ್ಶಕತೆ ಕಡ್ಡಾಯವಾಗಬೇಕು ಎಂಬುದು ಸ್ಪರ್ಧಾರ್ಥಿಗಳು ಹಾಗೂ ಪ್ರೇಕ್ಷಕರ ಒಮ್ಮತವಾದ ಅಭಿಪ್ರಾಯವಾಗಿದೆ.

Share This Article